ಜನಮೆಚ್ಚುವ ಸೇವೆಯಿಂದ ಜನ್ಮ ಸಾರ್ಥಕ – ವಾಮನ ಬಂಗೇರ
ಮಾನವ ಜನ್ಮದಲ್ಲಿ ಹುಟ್ಟಿದ ಮೇಲೆ ಸಾಧ್ಯವಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ದೇವರು ಮೆಚ್ಚುವ, ಜನಮೆಚ್ಚುವ ಕೆಲಸವನ್ನು ಮಾಡಿದರೆ ಜನ್ಮ ಸಾರ್ಥಕವಾಗುತ್ತದೆ ಹಾಗೆಯೇ ವಿದ್ಯಾರ್ಥಿಗಳಾಗಿರದೆ ವಿದ್ಯಾರ್ಥಿ ನಾಯಕರಾಗಲು ಪ್ರಯತ್ನಿಸಿ, ಪರರ ಸ್ಥಿತಿಯನ್ನು ಅರಿಯಬೇಕು, ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ವ್ಯಕ್ತಿಗಳಾಗಿ, ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತಾಗಲು ಎನ್.ಎಸ್.ಎಸ್ ನಲ್ಲಿ ಪಾಲ್ಗೊಳ್ಳುವುದರಿಂದ ಸಾಧ್ಯವಾಗುವುದಾಗಿ ಸತ್ಯಯುಗ ಯೋಗಾಶ್ರಮ ಕುತ್ಪಾಡಿ ಇದರ ಅಧ್ಯಕ್ಷರಾದ ಶ್ರೀ ವಾಮನ ಬಂಗೇರ ಹೇಳಿದರು.
ಅವರು ಮಾರ್ಚ್ 22 ರಂದು ಕುತ್ಪಾಡಿ ಶ್ರೀ ರಾಮಕೃಷ್ಣ ಭಜನಾ ಮಂದಿರ ಸತ್ಯಯುಗ ಯೋಗಾಶ್ರಮದಲ್ಲಿ ಆರಂಭಗೊಂಡ ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಗಮ ಸಾಂಸ್ಕೃತಿಕ ವೇದಿಕೆ ಕುತ್ಪಾಡಿ ಇದರ ಗೌರವಾಧ್ಯಕ್ಷ ಶ್ರೀ ಗಣೇಶ್ ಕುಮಾರ್, ಶ್ರೀ ರಾಮಕೃಷ್ಣ ಭಜನಾ ಮಂದಿರ ಕುತ್ಪಾಡಿ ಇದರ ಅಧ್ಯಕ್ಷ ಶ್ರೀ ಭಾಸ್ಕರ್ ಜತ್ತನ್ನ, ಸಾಫಲ್ಯ ಟ್ರಸ್ಟ್ ಉಡುಪಿಯ ಪ್ರವರ್ತಕರಾದ ಶ್ರೀಮತಿ ನಿರುಪಮಾ ಪ್ರಸಾದ್ ಶಿಬಿರಕ್ಕೆ ಶುಭಕೋರಿದರು.
ಯು.ಪಿ.ಎಂ.ಸಿಯ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಎನ್.ಎಸ್.ಎಸ್ ಯೋಜನಾಧಿಕಾರಿ ರಾಜೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು, ಸಹಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ನಿರೂಪಿಸಿದರು.